ಗಿರಿಕನ್ಯೆ......ನನ್ನ ಮನದನ್ನೆ!



ಅಕ್ಷರಾಕ್ಷರ ಸೇರಿ ಪದವಾಯಿತು.
ಪದಪದಗಳು ಸೇರಿ ಮಾತಾಯಿತು!
ಜೀವನದ ಪುಟಗಳು ಮೊದಲಾಯಿತು!
ನಾನೇ ಬರೆದ ನನ್ನಯ ಬದುಕಿನ ಸಾಲಾಯಿತು!

ನನ್ನಯ ಬದುಕು, ನನ್ನದೇ ಮಾತು!
ಕವಿಯು ನಾನೇ, ಪಾತ್ರವೂ ನಾನೇ!
ಪಾತ್ರಕೆ, ಜೀವನದ ಘಟನೆಯ ನಂಟು!
ಅದ ನಿಭಾಯಿಸುವ ಪರಿ, ನಿನ್ನ ನಿಘಂಟು!

ಕಣ್ಷೆದುರಿಗೆ ಅಗಾಧವಾದ ಬೆಟ್ಡ. ತಳದಿಂದ ಮುಡಿಯವರೆಗೂ ಒಮ್ಮೆ ಕಣ್ಣಳತೆ ಮಾಡಲು ಪ್ರಯತ್ನಿಸಿದೆ, ಕೊನೆ ನನ್ನ ಕಣ್ಣಳತೆಗೆ ಮೀರಿತ್ತು. ಸಮಯ ೧೧ ದಾಟಿತ್ತು. ಸೂರ್ಯ ನೆತ್ತಿಯ ಸುಡಲು ಒಡೋಡಿ ಬರುತ್ತಿದ್ದ, ಮಡದಿ, ಬೆಟ್ಟವನ್ನು ಹತ್ತಬೇಕೆಂದರೆ ಮನೆಯನ್ನು ಬೇಗನೇ ಬಿಡಲು ಬಾರಿಬಾರಿ ಹೇಳಿದ್ದಳು, ಆದರೆ ಭಾನುವಾರದ ಸವಿಯಾದ ನಿದ್ದೆಯಿಂದ ಏಳಲಾರದೆ ಎದ್ದು ಹೊರಟು, ಮಧುಗಿರಿಯನ್ನು ತಲುಪಿದಾಗ ೧೧  ದಾಟಿತ್ತು. ಮಡದಿ, ಮಗ ಬೆಟ್ಡವನ್ನು ಹತ್ತಲು ಉತ್ಸುಕರಾಗಿದ್ದರು, ಮಡದಿ ಮತ್ತೊಮ್ಮೆ ಹೇಳಿದಳು, ಇಷ್ಟೊಂದು ಬಿಸಿಲು, ನಾವು ಮುಂಜಾನೆಯೇ ಮಧುಗಿರಿ ತಲುಪಬೇಕಿತ್ತು. ಬೆಟ್ಟವನ್ನು ಮತ್ತೊಮ್ಮೆ ನೋಡಿದೆ. ನನ್ನ ಊಹೆಯಂತಿರಲಿಲ್ಲ. ಊಹೆಗೂ ಮೀರಿ. ಕೋಟೆ, ಗಿರಿಗಳ ಸಮ್ಮಿಶ್ರದ ಮಧುಗಿರಿ ಉಳಿದ ಬೆಟ್ಟಗಳಿಗಿಂತ ವಿಶಿಷ್ಟವಾಗಿತ್ತು.

ಮಡದಿಯನ್ನೊಮ್ಮೆ ನೋಡಿದೆ, ಮನ ಹಿಂದೋಡಿತು. ಅಂದು ಮದುವೆಗೆ ಹುಡುಗಿಯ ನೋಡಲು ದಿನ ನಿಶ್ಷಯವಾಗಿತ್ತು. ಕನ್ನಡ, ತೆಲುಗು ಸಿನಿಮಾಗಳನ್ನು ನೋಡಿ ಬೆಳದಿದ್ದ ಮನ ಅದೇ ದಾಟಿಯ ಕನಸಿನ ಕನ್ಯೆಯ ಹುಡುಕಾಟದಲ್ಲಿತ್ತು. ಸುಂದರ ಮೊಗದ, ನಾಚಿಕೆ ವಯ್ಯಾರದ, ಗಂಡನೇ ಸರ್ವಸ್ವ ಎನ್ನುವ, ಗಂಡನನ್ನು ತುಂಬಾ ಪ್ರೀತಿಸುವ, ಸೀನಿಮೀಯ ಪ್ರಪಂಚದ ಹೀರೋಯಿನ್ ಗೆ ಎದುರು ನೋಡುತ್ತಿದ್ದೆ. ಹುಡುಗಿಯನ್ನೊಮ್ಮೆ ನೋಡಿದೆ. ಮುಖ ನಿರ್ಭಾವದಿಂದ ಕೂಡಿತ್ತು. ಮಾತಿನಲ್ಲಿ ಇದ್ದ ಆ ಖದರ್, ಕಾಂತಿಯುಕ್ತ ಕಣ್ಣಲಿದ್ದ ಆ ತುಂಟತನ, ಯಾಕೋ ಇಷ್ಟವಾಯಿತು. ನನ್ನ ಕನಸಿನ ಕನ್ಯೆಯಲ್ಲದಿದ್ದರೂ, ಉಳಿದ ಹುಡುಗಿಯರಿಗಿಂತ ಸಂಪೂರ್ಣ ಭಿನ್ನವೆನಿಸಿತು.

ಮಡದಿ, ಮಗ ಆಗಲೇ ಬೆಟ್ಟ ಏರುವ ಹುಮ್ಮಸ್ಸಿನಿಂದ ಮುಂಚೂಣಿಯಲ್ಲಿದ್ದರು. ಅವರನ್ನು ಸಮೀಪಿಸಲು, ಲಘುಬಗೆಯಿಂದ ಹೆಜ್ಜೆ ಹಾಕಿದೆ. ಆಶ್ಚರ್ಯ, ನಾವೊಬ್ಬರೇ ಅಲ್ಲದೆ ಸುಡುಬಿಸಿಲಿನಲ್ಲಿ ಹಲವಾರು ಪರಿವಾರಗಳು ನಮ್ಮೊಂದಿಗೆ ಆಗ ತಾನೆ ಬೆಟ್ಟ ಏರಲು ಪ್ರಾರಂಭಿಸಿದ್ದವು, ನಾವು ನಮ್ಮದೇ ಆದ ದಿಕ್ಕಿನಲ್ಲಿ ನಮ್ಮ ಪಯಣ ಪ್ರಾರಂಭಿಸಿದೆವು. ಮಡದಿ  ಮಧುಗಿರಿಯ ಸುಂದರ ದೃಶ್ಯಗಳನ್ನು, ತನ್ನ ಕ್ಯಾಮರದಲ್ಲಿ ಬಂಧಿಸುವ ಉತ್ಸುಕತೆಯಲ್ಲಿದ್ದಳು. ಕೋಟೆಯಿಂದ ಆವೃತವಾದ ಆ ಬೆಟ್ಟ ನಮ್ಮ ಕಣ್ಣಿಗೆ ಕಾಣುವಷ್ಟು ಮಾತ್ರವೇ ತನ್ನನ್ನು ಪರಿಚಯಿಸಿಕೊಳ್ಳುತ್ತಿತ್ತು. ಬೆಟ್ಟವ ಏರಲು ಅಲ್ಲಲ್ಲಿ ದಾರಿ, ಒಮ್ಮೆಲೆ ದಾರಿಯೇ ಕಾಣದು, ಮೇಲೇರುವ ಪರಿ? ದಾರಿ ತಪ್ಪಿದೆವೇ? ಎಲ್ಲರೂ ಹೊರಟ ದಾರಿಯನ್ನು ಅನುಕರಿಸಬೇಕಿತ್ತೇ? ನೂರಾರು ಅನುಮಾನಗಳು. ಉತ್ತರ? ಅಬ್ಬಾ ಬೆಟ್ಟವೇ!

ಪಾತ್ರಕ್ಕೊಂದು ಜೊತೆಗಾತಿಯ ನೀರೀಕ್ಷೆ!
ಅದಕ್ಕೊಂದು ಮನ ಮನಸ್ಸಿನ ಪರೀಕ್ಷೆ!
ಪಾತ್ರದೊಂದಿಗೆ, ಜೊತೆಗಾತಿಯ ಮನಸಿನ ಆಕಾಂಕ್ಷೆ!
ಮುನ್ನುಡಿಯಾಯಿತು ದಾಂಪತ್ಯದ ಸಮೀಕ್ಷೆ!

ಬದುಕಿನ ಪುಟಗಳ ಪುನರ್ ಬರವಣಿಗೆ!
ಹೊಸ ಬಾಳು, ಹೊಸ ಕನಸಿನ ಮೆರವಣಿಗೆ!
ಅರಿವಿಲ್ಲವಳಿಗೆ ನನ್ನ ಹಿಂದಿನ ಬರವಣಿಗೆ!
ನನಗೆ ಬೇಕಿರಲ್ಲಿಲ್ಲ ಅವಳ ಹಿಂದಿನ ಜೀವನದ ನಡಿಗೆ!

ದಾಂಪತ್ಯಕ್ಕೆ ಕಾಲಿಟ್ಟ ಆ ದಿನ. ಉತ್ಸಾಹದಿಂದಿದ್ದೆ, ಮದುವೆಯ ಮಂಟಪದಿಂದ ಹೆಂಡತಿಯನ್ನು ಮನೆ ತುಂಬಿಸಲು ಕರೆದುಕೊಂಡ ಹೊರಟ್ಟಿದ್ದೆ, ಕಾರಿನಲ್ಲಿ ಪಕ್ಕದಲ್ಲೇ ಕುಳಿತ ಹೆಂಡತಿಯ ಸಂಪೂರ್ಣ ವಿಷಯವನ್ನು, ಅವಳ ಮನಸ್ಸನ್ನು ಒಮ್ಮೆಲೇ ಅರಿಯುವ ಅಸಕ್ತಿ. ಅದರೆ ಇದಾವ ಅರಿವಿಲ್ಲದ ಅವಳ ನಿರಾಭಾವ ಮುಖ, ನಾನು ಕೇಳಿದ ಪ್ರಶ್ನೆಗೆ ಮಾತ್ರವೇ ಉತ್ತರ. ಸೀನೀಮಿಯ ಹೀರೋಯಿನ್ ನಲ್ಲಿರಬೇಕಾದ ಭಯ, ಅಪ್ಪ ಅಮ್ಮನ ತೊರೆಯಬೇಕಾದ ಸಂಧರ್ಭದ ಆ ಅಳು, ಆ ದುಗುಡ ಅಲ್ಲಿರಲ್ಲಿಲ್ಲ. ಅರ್ಥವಾಗಲಿಲ್ಲ, ಹೌದು ಪಕ್ಕದಲ್ಲಿ ಕುಳಿತ ಹೆಣ್ಣು, ಆ ಹೆಣ್ಣಿನ ಮನಸ್ಸು, ಸ್ವಲ್ಪ ಕೂಡಾ ಅರ್ಥವಾಗಿರಲಿಲ್ಲ. ಮನದಲ್ಲಿ ನೂರಾರು ಪ್ರಶ್ನೆಗಳು. ಉತ್ತರ ಸುಲಭವಾಗಿರಲ್ಲಿಲ್ಲ!ಅಬ್ಬಾ ಹೆಣ್ಣೇ!

ದಾಂಪತ್ಯವೆಂದರೆ ನನ್ನ ಆಗಿನ ಯೋಚನೆ ಇಷ್ಟೆ! ಪತಿ ಪತ್ನಿಯ ಸಹಬಾಳ್ವೆ, ಕುಟುಂಬದ ಸದಸ್ಯರ  ತೊರೆದು ನನ್ನನ್ನೇ ನಂಬಿ ಬಂದ ಹೆಂಡತಿಗೆ, ಯಾವುದೇ ಕೊರತೆಯಾಗದಂತೆ, ಪ್ರೀತಿಯಿಂದ ನೋಡಿಕೊಳ್ಳುವುದು! ಅವಳು ಅಷ್ಟೇ ಪ್ರೀತಿಯಿಂದ, ಗಂಡನೇ ಸರ್ವಸ್ವವೆಂದು ಕೂಡಿ ಬಾಳುವುದು. ಇಷ್ಟೇ! ಅಬ್ಬಾ ನನ್ನ ಮೇಲಿನ ಸಿನೀಮಾದ ಪ್ರಭಾವವೇ!

ಮಗ ಮುಂದೆ ದಾರಿಯಿರಬಹುದೇ ಎಂದು ದಾರಿಹುಡುಕುತ್ತಾ ಮುಂಚೂಣಿಯಲ್ಲಿದ್ದ, ನಾನು ತುಂಟ ಮಗ ಎಲ್ಲಾದರೂ ತಪ್ಪಿಸಿಕೊಳ್ಳಬಹುದೆಂದು ಅವನ ಹಿಂದೆ, ಮಡದಿ ಮಧುಗಿರಿಯ ದೃಶ್ಯಗಳನ್ನು ಸೆರೆಹಿಡಿಯುತ್ತಾ ನಾವು ತೋರಿದ ದಾರಿಯಲ್ಲಿ, ನಮ್ಮಗಳ ಹಿಂದೆ.

ಅಪ್ಪಾ ಇಲ್ಲಿ ದಾರಿಯೇ ಇಲ್ಲ, ಇಲ್ಲಿ ಹೋಗಲಿಕ್ಕಾಗದು ಎಂದು ಒಮ್ಮೆ ಎಂದರೆ, ಅಪ್ಪಾ ಇಲ್ಲಿಂದ ಹೋದರೆ ದಾರಿ ಸಿಗಬಹುದು. ಮಗನ ಕುತೂಹಲಭರಿತ ಸಲಹೆ. ಮಧುಗಿರಿಯ ಬೆಟ್ಟವನ್ನೇರಲು ಬಂದ, ಅದರ ಸಂಪೂರ್ಣ ಪರಿಚಯ ಮಾಡಿಕೊಳ್ಳಬೇಕೆಂಬ ನಮ್ಮ ಬಯಕೆ ಅವನನ್ನು ಹಿಂಬಾಲಿಸುವಂತೆ ಮಾಡಿತು.  ಆ ಕಿರಿದಾದ ಹಾದಿಯನ್ನು ದಾಟಿದೊಡನೆ ದಾರಿಗೆ ಅಡ್ಡಲಾಗಿ ಅಲ್ಲೊಂದು ದೊಡ್ಡ ಬಂಡೆ. ಮಗನನ್ನು ಅದರ ಮೇಲೇರಿಸಿ ಆ ಕಡೆಯಿಂದ ದಾರಿ ಇರಬಹುದೆಂದು ನೋಡಿದರೆ, ಯಾವುದೇ ದಾರಿಯ ಸುಳಿವಿಲ್ಲ. ಹೆಂಡತಿಯ ಮುಖದ ಮೇಲಿನ ಪ್ರಶ್ನೆಗೆ, ದಾರಿ ಇಲ್ಲವೆಂಬ ನನ್ನ ಸೂಚನೆ. ಸಾಕು ಹೋಗಿಬಿಡುವ ಎಂಬ ಅವಳ ಅಸಹಾಯಕ ಸಲಹೆ. ಮಗನಿಗೆ ಬೆಟ್ಟವ ಏರುವ ಅವಕಾಶ ಎಲ್ಲಿ ತಪ್ಪಬಹುದೋ ಎಂಬ ಆತಂಕ. ಮೂವರ ಮನದ ಮೂಲೆಯಲ್ಲೂ ಬೇಸರ!

ದಾಂಪತ್ಯವೆಂದರೆ ಸಹಬಾಳ್ವೆ ಸರಿ! ಗಂಡಹೆಂಡಿರ ಪ್ರೀತಿ ಅದೂ ಸರಿ! ಆದರೇ ಅದು ಅಷ್ಟೊಂದು ಸಲೀಸೇ? ಎಲ್ಲಿಂದಲೋ ಬಂದ, ಗುರುತೇ ಇಲ್ಲದ ಹುಡುಗ, ಹುಡುಗಿ, ಅಚಾನಕ್ ಒಂದೇ ಸೂರಿನಡಿ!  ಅವನ ಹವ್ಯಾಸಗಳು ಬೇರೆ, ಅವನ ರೀತಿ ನೀತಿಗಳು ಬೇರೆ. ಅವಳ ಯೋಚನೆಗಳು ಬೇರೆ, ಅವಳ ವಿಚಾರಗಳು ಬೇರೆ. ಅಬ್ಬಾ ಇವನೆಷ್ಟು ಆಲಾಸಿ, ಛೇ..ಇವಳೇಕೆ ಇಷ್ಟೊಂದು ಹಠಮಾರಿ! ಮದುವೆಯ ನಂತರ ಒಂದೊಂದೇ ಪರಿಚಯವಾಗುವ ಪರಸ್ವರ ಗುಣಗಳು, ಎಷ್ಟರ ಮಟ್ಟಿಗೆ ಸಹಬಾಳ್ವೆ ನಡೆಸಲು ಸಹಾಯ ಮಾಡಬಹುದು? ಎಷ್ಟರ ಮಟ್ಟಿಗೆ ದೈಹಿಕ ಪ್ರೀತಿಗೂ ಮೀರಿ ನಿಜವಾದ ಪ್ರೀತಿ ಪರಸ್ಪರರಲ್ಲಿ ಮೂಡಿಸಬಹುದು.  ಕೆಲ ದಾಂಪತ್ಯಗಳು, ಸಹನೀಯವಾಗದಿದ್ದರೂ ಅನಿವಾರ್ಯವಾಗಿ ನಡೆದುಕೊಂಡು ಹೋಗುತ್ತದೆ. ಮತ್ತೆ ಕೆಲವು ಸಹನೀಯವಾಗದೇ, ಜೊತೆಯಲಿ ಬಾಳಲಾರದೆ, ಆ ದಾರಿಯನ್ನು ಅಲ್ಲಿಯೇ ಮೊಟಕುಗೊಳಿಸಿ,  ದಾಂಪತ್ಯ ಅಲ್ಲಿಯೇ ಮುರಿದು ಬೀಳುತ್ತದೆ. ಮತ್ತೆ ಕೆಲವು ನನ್ನ ಈ ಸಿನೀಮೀಯ ಮಾದರಿಯಲ್ಲಿ. ಗಂಡನೇ ಸರ್ವಸ್ವ ಎಂಬ ಹೆಂಡತಿ, ಹೆಂಡತಿ ಮಕ್ಕಳೇ ನನ್ನ ಪ್ರಪಂಚ ಎಂಬ ಗಂಡ! ಅದರೆ, ನಮ್ಮ ದಾಂಪತ್ಯ ಇವೆಲ್ಲಕ್ಕೂ ಮೀರಿ, ನಮ್ಮದೇ ಆದ, ನಾವೇ ಹುಡುಕಿಕೊಂಡು ಹೊರಟ ನಮ್ಮತನಗಳಿಂದ ಕೂಡಿದ ದಾರಿಯಲ್ಲಿ ಸಾಗಿತ್ತು!

ಮಗ ಕೂಗಿದ, ”ಅಪ್ಪಾ ಇಲ್ಲಿದೆ ದಾರಿ! ನಮಗಿಬ್ಬರಿಗೂ ಏನೋ ಖುಷಿಯೆನಿಸಿತು, ನಿಜವಾಗಲು ಇರಬಹುದೇ ದಾರಿ ಎಂದು ಪರೀಕ್ಷಿಸಿದೆ. ನಿಜ ಅಲ್ಲಿದೆ ದಾರಿ! ಒಳಹೊಕ್ಕು ನೋಡಿದರೆ, ಬೆಟ್ಟದ ಮೇಲೋಂದು ಕೋಟೆ, ಅಹಾರ ಸಂಗ್ರಹಿಸುವ ಉಗ್ರಾಣ, ನೀರಿಲ್ಲದ ಪುಷ್ಕರಣಿ, ಅದರ ಮೇಲೊಂದು ಗುಡ್ಡ, ಗುಡ್ಡದ ಮೇಲೊಂದು ಮತ್ತೆ ಕೋಟೆ! ಮಧುಗಿರಿ ಸ್ವಲ್ಪಸ್ವಲ್ಪವೇ ನಮಗೆ ಅರ್ಥವಾಗತೊಡಗಿತು! ಎಲ್ಲರೂ ಬಂದ ದಾರಿಯಲ್ಲಿ ನಾವು ಬಂದಿದ್ದರೆ ಈ ಸ್ಥಳವನ್ನು ಕೂಲಂಕಷವಾಗಿ ನೋಡಲಾಗುತ್ತಿತ್ತೆ ಎಂಬ ಪ್ರಶ್ನೆಗೆ ಆಗ ನಮ್ಮಲ್ಲಿ ಉತ್ತರವಿರಲಿಲ್ಲ.

ಹೆಂಡತಿ ಸ್ವಲ್ಪಸ್ವಲ್ಪವೇ ಅರ್ಥವಾಗತೊಡಗಿದಳು. ನಾವಿಬ್ಬರೂ ಸ್ವಭಾವದಲ್ಲಿ ಪರಸ್ಪರ ಸಂಪೂರ್ಣ ವಿರುದ್ಧ. ಅವಳೋ ನೇರ ನುಡಿಯ, ಭಾವನೆಗಳನ್ನೆಲ್ಲಾ ಮನಸ್ಸಿಗೆ ತೆಗೆದುಕೊಳ್ಳದ, ಯಾವುದೇ ಕೆಲಸವನ್ನಾದರೂ, ಶ್ರದ್ಧೆಯಿಂದ, ಅಚ್ಚುಕಟ್ಟಾಗಿ, ಮುಗಿಸುವುದೊಂದೇ ಗುರಿಯೊಂದಿಗೆ, ಸಿನಿಮಾ, ಕಥೆಪುಸ್ತಕವಿದ್ದರೆ ಲೋಕವನ್ನೇ ಮರೆಯುವ, ಯಾವುದೇ ವಿಷಯವಾದರೂ ತನ್ನ ಪುಟ್ಟ ತಲೆಯಿಂದ ಗಬಕ್ಕನೆ ತೆಗೆದು ಅದನ್ನು ವಿವರಿಸುವ ರೀತಿ, ತನ್ನನ್ನು ತಾನು ಅತಿಯಾಗಿ ಪ್ರೀತಿಸುವ, ತನ್ನದೇ ಒಂದು ಪುಟ್ಟ ಪ್ರಪಂಚವನ್ನು ಮನದಲ್ಲಿರಿಸಿ, ಹೊರಗೊಂದು ನೋ ಎಂಟ್ರಿ ಬೋರ್ಡ್ ಲಗತ್ತಿಸಿ, ಅದ್ಬುತ ಜ್ನಾನಭಂಡಾರದ ಒಡತಿ. ಯಾರಿಗೂ ಸುಲಭದಲಿ ಅರ್ಥವಾಗದ, ನಾ  ನೋಡಿದ ಎಷ್ಟೋ ಹುಡುಗಿಯರಿಗಿಂತ, ಎಷ್ಟೋ ಮಾದರಿ ಸಿನಿಮಾ ನಾಯಕಿಯರಿಗಿಂತ, ಕಥಾ ಪುಸ್ತಕದ  ಕಥಾ ನಾಯಕಿಯ ಪಾತ್ರಗಳಿಗಿಂತ ಸಂಪೂರ್ಣ ವಿಭಿನ್ನ!

ದಾಂಪತ್ಯದ ಸಹಬಾಳ್ವೆ ಸಾಧ್ಯ, ಆದರೆ ಆ ಸಹಬಾಳ್ವೆಯ ನಡುವೆ ಹರಿಯುವ ಪ್ರೀತಿ? ದಾಂಪತ್ಯದ ಜೀವನದ ಆರಂಭಿಕ ಹಂತ, ನೂರಾರು ಕನಸುಗಳ, ಸಾವಿರಾರು ಭರವಸೆಗಳ ಮೇಲಿನ, ಹೆಂಡತಿಯೇ ಚಿನ್ನ ರನ್ನ, ಗಂಡನೇ ಸರ್ವಸ್ವ ಎಂಬ ಮನಸ್ಥಿತಿಯ ತಳಹದಿಯ ಮೇಲೆ ಪ್ರಾರಂಭವಾಗುವ ದಾಂಪತ್ಯ ದಿನ ಕಳೆದಂತೆ ತನ್ನ ಮೂಲ ನಿರ್ಧಾರದ ವಿರುಧ್ಧ ದಿಕ್ಕಿನೆಡೆ ಸಾಗುತ್ತದೆ. ದಾಂಪತ್ಯ ಜೀವನ ಅಸಹನೀಯವಾಗ ತೊಡಗುತ್ತದೆ. ತೀರ ಅಸಹನೀಯವಾದೊಡನೆ, ಒಬ್ಬಂಟಿ ಜೀವನವೇ ಉತ್ತಮ ಎನಿಸುತ್ತದೆ, ಎಲ್ಲಿಂದಲೋ ಬಂದು ಕೂಡಿದ ಎರಡು ಜೀವ, ಶತ್ರುಗಳಾಗಿ ಬದಲಾಗುತ್ತಾರೆ, ಕೊನೆಗೆ ಬೇರ್ಪಡುತ್ತಾರೆ! ಈ ಪ್ರಾರಂಭಿಕ ಹಂತ ಮತ್ತು ಬೇರ್ಪಡುವ ಕೊನೆಯ ಹಂತದ ನಡುವಿನ  ಸಮತೋಲನ ಕಾಯ್ದುಕೊಳ್ಳುವಿಕೆಯೇ ಸಹಬಾಳ್ವೆ.  ಈ ಸಹಬಾಳ್ವೆ ಸಮಾಜದ ಕಣ್ಣಿಗೆ ಕೆಟ್ಟವರಾಗಬಾರದೆಂಬ ಕಾರಣದಿಂದ ಇರಬಹುದು, ಬೇರ್ಪಟ್ಟರೆ ಮುಂದಿನ ಜೀವನದ ಅಭದ್ರತೆಯ ಭಯವಿರಬಹುದು, ಮಕ್ಕಳ ಮುಂದಿನ ಭವಿಷ್ಯದ ಚಿಂತೆಯಿಂದಿರಬಹುದು, ಹೆಂಡತಿ ಇಷ್ಟೊಂದು ಕೆಲಸ ಮಾಡಿ ನಮ್ಮನ್ನು ನೋಡಿಕೊಳ್ಳುತ್ತಿರುವಳೆಂಬ ಅಥವಾ ಗಂಡ ಹೊರಗೆ ದುಡಿದು ನಮ್ಮನ್ನೆಲ್ಲಾ ಸಾಕಿ ಸಲಹುತ್ತಿರುವನೆಂಬ ಕನಿಕರವಿರಬಹುದು, ಗಂಡನಿಗೆ ಇದೊಂದು ಜವಾಬ್ದಾರಿ, ಹೆಂಡತಿಗೆ  ಕರ್ತವ್ಯ.

ಮಧುಗಿರಿಯ ಮೇಲೆ ಏರಿದಂತೆಲ್ಲಾ ದಾರಿ ಕ್ಲಿಷ್ಟಕರವಾಗತೊಡಗಿತು. ಮಗ ಉತ್ಸಾಹದಿಂದ ಮುಂಚೂಣಿಯಲ್ಲಿದ್ದ. ಆಗಾಗಲೇ ನಾಲ್ಕಾರು ಕಡೆ ಕುಳಿತು ವಿಶ್ರಾಂತಿ ತೆಗೆದುಕೊಂಡಾಗಿತ್ತು. ಬಾಯಾರಿಕೆಗೆಂದು ಹಿಡಿದಿದ್ದ ನೀರು ಖಾಲಿಯಾಗಿತ್ತು. ಇನ್ನೂ ಎಪ್ಪತ್ತು ಶೇಕಡದ ಬೆಟ್ಟವನ್ನು ಏರಲು ಬಾಕಿಯಿತ್ತು. ಸೂರ್ಯ ನೆತ್ತಿಯ ಮೇಲೆ ನಿಂತು ತನ್ನ ಪ್ರತಾಪ ತೋರಿಸುತಲಿದ್ದ. ಮತ್ತೆ ಏರಲು ಸಾಧ್ಯವೇ ಇಲ್ಲವೆನಿಸಿತು. ಬಿಸಿಲಿನ ತಾಪ ಮಡದಿಯ ಉತ್ಸಾಹವನ್ನು ಸ್ವಲ್ಪ ತಣ್ಣಗಾಗಿಸಿತ್ತು. ಈ ಉರಿಬಿಸಿಲಿನಲ್ಲಿ ಇನ್ನುಳಿದ ಗಿರಿಯನ್ನು ಏರಲು ಅಸಾಧ್ಯವೆನಿಸಿ ಮಡದಿ, ಮಗನಿಗೆ ನಾಳೆ ಮತ್ತೆ ಬೆಳ್ಳಬೆಳ್ಳಂಗೆಯೇ ಹೊರಡುವ ಆಮೀಷವನ್ನಿತ್ತು, ಏರಿದ ಬೆಟ್ಟವನ್ನು ಇಳಿಯಲು ಪ್ರಾರಂಭಿಸಿದೆವು.

ಆಮೀಷವಿತ್ತಂತೆ ಮಾರನೆಯ ದಿನವೇ ಹೊರಡಲು ಸಾಧ್ಯವಾಗದಿದ್ದರು ಅದೊಂದು ಭಾನುವಾರ ಹೊರಡುವ ಘಳಿಗೆ ಕೂಡಿಬಂತು. ಎಂದೂ ಒಬ್ಬಂಟಿಯಾಗಿ ಬಾರದ ಅಕ್ಕ ಅಂದು ತಮ್ಮನ ಮನೆಯಲ್ಲಿ ಒಂದೆರಡು ದಿನವನ್ನು ಕಳೆಯಲು ಶನಿವಾರವೇ ಬಂದಿದ್ದರು. ಆ ಸಂಜೆ, ನಾಳೆ ಮಧುಗಿರಿಗೆ ಹೊರಡೋಣವೇ ಎಂದಾಗ ಎಲ್ಲರದು ಒಮ್ಮತದ ಸಕಾರಾತ್ಮಕ ನಿರ್ಧಾರ.

ನಾಲ್ವರು ಮಧುಗಿರಿಯನ್ನು ತಲುಪಿದಾಗ, ಆಗಾಗಲೇ ಒಂಭತ್ತಾಗಿತ್ತು. ಈ ಸಲ ನೇರವಾದ ದಾರಿಯಲ್ಲಿಯೇ ನಮ್ಮ ಪಯಣ ಮುಂದುವರಿಸಿದೆವು. ಮಧುಗಿರಿ ನಮಗೆ ಆಗಾಗಲೇ ಅಲ್ಪಸ್ವಲ್ಪ ಪರಿಚಯವಾಗಿತ್ತು. ಕೊನೆಯ ಸಲ ನಾವು ತಲುಪಿದ ಸ್ಥಳಕ್ಕೆ ತಲುಪಲು ಹೆಚ್ಚು ಸಮಯ ಬೇಕಾಗಲಿಲ್ಲ. ಅಲ್ಲದೆ ಸೂರ್ಯ ಕೂಡಾ ಮೋಡದ ಮರೆಯಿಂದ ಬರಲು ತಿಣಕಾಡುತ್ತಿದ್ದ. ಏರುವ ದಾರಿಯನ್ನೊಮ್ಮೆ ನೋಡಿದೆವು, ಏರಬಹುದೆನಿಸಿತು. ಮಡದಿ ಮತ್ತು ಮಗನಲ್ಲಿ ಉತ್ಸಾಹ ಮತ್ತು ಎನರ್ಜಿ ಹೆಚ್ಚಿತ್ತು. ಅವರ ಉತ್ಸಾಹ ನನ್ನ ಉತ್ಸಾಹವನ್ನು ದ್ವಿಗುಣಗೊಳಿಸಿತು.

ಮೇಲೇರಿದಂತೆಲ್ಲಾ ದಾರಿ ಕ್ಲಿಷ್ಟಕರವಾಗತೊಡಗಿತು. ಇಳಿಜಾರದ ಆ ಬಂಡೆಯ ಮೇಲೆ, ಸಹಾಯಕ್ಕೆಂದು ನೆಟ್ಟ ಕಂಬಿಗಳು. ಕೆಲವು ಕಡೆ ಮಾಯವಾಗಿತ್ತು. ಹೇಗೆ ಮೇಲೆರುವುದೆಂಬ ಪ್ರಶ್ನೆ, ಮಗ ಅಗಾಗಲೇ ತನ್ನ ದೇಹದ ಭಾರವನ್ನೆಲ್ಲಾ ಬಂಡೆಯ ಮೇಲೆ ಹಾಕಿ ಕುಳಿತು, ನಿಧಾನವಾಗಿ ತೆವಳುತ್ತಾ ಸಾಗಬಹುದೆಂದು ತೋರಿಸಿಕೊಟ್ಟ. ಮಗನ ರಕ್ಷಣೆಗೆ ನಾನು, ನನ್ನಿಂದೆ ಮಡದಿ,  ಅವನು ತೋರಿಸಿದ ರೀತಿ ತೆವಳಲು ಪ್ರಾರಂಭಿಸಿದೆವು. ಮನವೆಲ್ಲಾ ಭಯದಿಂದ ಕೂಡಿತ್ತು. ಒಮ್ಮೆ ಆ ಘಟ್ಟವನ್ನು ದಾಟಿದ ನಂತರ ಮನ ನಿರಾಳವಾಯಿತು. ಮುಂದೆ ಇನ್ನೂ ಕಷ್ಟಕರ ದಾರಿ, ಎಂಬ ಸಹ ಪಯಣಿಕನ ನುಡಿ, ಒಮ್ಮೆ ಮನವನ್ನು ಭಯಪಡಿಸಿತು.

ಗಂಡ ಹೆಂಡತಿಯನ್ನು, ಹೆಂಡತಿ ಗಂಡನನ್ನು ಅರ್ಥಮಾಡಿಕೊಂಡಂತೆಲ್ಲಾ ದಾಂಪತ್ಯ ಸುಲಭವಾಗುತ್ತದೆ. ನಮ್ಮ ಸಂಗಾತಿ ನಾವು ನೀರಿಷಿಸಿದ ಮಟ್ಟದಲ್ಲಿ ಇಲ್ಲದೆ ಹೋದರೂ, ನಮ್ಮ ಸಿದ್ದಾಂತಗಳಿಗೆ ರಾಜಿಯಾಗುತ್ತಾ, ಅವರ ಒಳ್ಳೆಯ ಗುಣಗಳನ್ನು ಗೌರವಿಸುತ್ತಾ, ಆದರಿಸುತ್ತಾ, ಸಂಸಾರದ ನೌಕೆಯನ್ನು ಎಳೆದುಕೊಂಡು ಹೊರಡುತ್ತೇವೆ. ಅವರ ಗುಣ ಸ್ವಭಾವಗಳ ಪರಿಚಯವಾದಂತೆಲ್ಲಾ, ನಮ್ಮನ್ನು ಪರಸ್ಪರ ಆ ಗುಣಸ್ವಭಾವಗಳಿಗೆ ಹೊಂದಿಸಿಕೊಳ್ಳುತ್ತೇವೆ.  ಪ್ರತಿ ಬಾರಿ ಅಸಹಜ ಗುಣಗಳ ಪರಿಚಯವಾದಂತೆ, ಒಂದು ಜಗಳ, ನಂತರ ರಾಜಿ, ನಂತರ ಯಥಾ ಪ್ರಕಾರ ದಾಂಪತ್ಯ ಜೀವನ ಶುರು.

ನಮ್ಮಿಬ್ಬರ ಪದಗಳಿಂದ ಹೊಸ ಪುಟಗಳು!
ಕೆಟ್ಟ ಘಳಿಗೆಯ ಮರೆತು, ಇಷ್ಟ ಘಳಿಗೆಯ ಮೆಲುಕು!
ನೆನಪಾಗದ ಪದ, ಅವಳ ಮನಸಿನೊಳಗಿಂದ ಗೋಚರ!
ಇಷ್ಟವಾಗದ ಪದ, ನನ್ನಯ ಲೇಖನಿಯಿಂದ ಅಗೋಚರ!

ನಮ್ಮಯ ಬದುಕು, ನಮ್ಮದೇ ಮಾತು!
ಬರಹಗಾರರು ನಾವೇ, ಪಾತ್ರಗಳು ನಾವೇ!
ನಮ್ಮಯ ಕಥೆಗೆ ನಮ್ಮಯ ಪ್ರೀತಿಯ ನಂಟು!
ಮೆಲುಕು ಹಾಕಬಹುದು, ನಾವಿಬ್ಬರೂ ಕೂತು!

ದಾಂಪತ್ಯ ಜೀವನಕ್ಕೂ ಮೊದಲಿನ ಜೀವನದ ಪುಟಗಳನ್ನು ನಾವೊಬ್ಬರೇ ಬರೆದಿರುತ್ತೇವೆ. ಅದು ದಾಂಪತ್ಯ ಜೀವನದಲ್ಲಿ ಪರಸ್ಪರರಿಗೆ ಬೇಕಿಲ್ಲ. ಪತಿ ಪತ್ನಿ ಇಬ್ನರೂ ಸೇರಿ ಬರೆಯುವ ದಾಂಪತ್ಯ ಜೀವನದ ಪುಟಗಳು ಮುಖ್ಯವೆನಿಸುತ್ತದೆ.  ಅದನ್ನು ಮಹಾಕಾವ್ಯವಾಗಿಸುವುದು ಇಬ್ಬರ ಜವಾಬ್ದಾರಿ ಕೂಡಾ.

ಪರಸ್ಪರರಲ್ಲಿ ನಂಬಿಕೆ, ಪತಿ ಪತ್ನಿ ಸಂಬಂಧದ ಮಧ್ಯೆ ಹಣದ ವಿಷಯ ಬಾರದಿರುವಿಕೆ, ಪರಸ್ಪರರಿಗೆ ಅವರದೇ ಆದ ಸಮಯ ಒದಗಿಸುವ ಸೌಜನ್ಯ, ಹಾಗೂ ಸ್ವಲ್ಪ ಓಳ್ಳೆಯ ಮನಸು, ಪತಿ ಪತ್ನಿಯಲ್ಲಿ ಸಹಬಾಳ್ವೆಯೊಂದಿಗೆ ಪ್ರೀತಿಯ ಸಿಂಚನ. ದಾಂಪತ್ಯದ ಕ್ಲಿಷ್ಟಕರ ದಾರಿಯೂ ಪರಸ್ಪರರ ಸಹಾಯದಿಂದ ಸುಲಭವೆನಿಸುತ್ತದೆ.

ದಾರಿ ಮತ್ತಷ್ಟು ಕ್ಲಿಷ್ಟಕರವಾಗತೊಡಗಿತು ಅದರೊಂದಿಗೆ ಆಯಾಸ. ಮಗ, ಮಡದಿಯ ಉತ್ಸಾಹ ಬತ್ತಿರಲಿಲ್ಲ. ಕಸರತ್ತಿಲ್ಲದ ನನ್ನ ದೇಹ, ನನ್ನ ಉತ್ಸಾಹವನ್ನು ಅದುಮಿಟ್ಟಿತ್ತು. ಇನ್ನು ನಡೆಯಲು ಅಸಾಧ್ಯವೆಂದು ದೇಹ, ಮಗ, ಮಡದಿಯ ಉತ್ಸಾಹಕ್ಕೆ ತಣ್ಣೀರೆರಚಬಾರದೆಂದು ಮನಸು. ಅವರಿಗೆ ನೀವು ಮುಂದುವರಿಯಿರಿ, ನಾನು ಹಿಂದೆ ನಿಧಾನವಾಗಿ ಬರುವೆನೆಂದು ಹೇಳಿ ಅಲ್ಲಿಯೇ ಸ್ವಲ್ಪ ಕಾಲ ವಿಶ್ರಾಂತಿ. ಆ ಫಟ್ಟವನ್ನು ದಾಟಲು ಹರಸಾಹಸ ಪಡಬೇಕಾಯಿತು. ನಿಂತರೆ ತಲೆ ತಿರುಗಿದ ಅನುಭವ. ಸೂರ್ಯ ನೆತ್ತಿಯ ಸುಡುತ್ತಿದ್ದ. ಸ್ವಲ್ಪ ದೂರದಲ್ಲೇ ನೆರಳು ಕಾಣುತ್ತಿದ್ದರೂ, ಅದನ್ನು ಸಮೀಪಿಸಲಾಗದ ಅಸಹಾಯಕತೆ. ಮಡದಿ, ಮಗನನ್ನು ಕರೆದುಕೊಂಡು, ಬೆಟ್ಟದ ತುದಿಯ ತಲುಪಲು ಹೊರಟಳು.

ಪತಿ ಪತ್ನಿಯ ನಡುವಿನ ಅನ್ಯೋನ್ಯತೆ ಅವರ ನಡುವಿನ ಪ್ರೀತಿಯನ್ನು ದ್ವಿಗುಣಗೊಳಿಸುತ್ತದೆ, ಮಕ್ಕಳು ಭಾಂದವ್ಯವನ್ನು ಗಟ್ಟಿಗೊಳಿಸುತ್ತಾ ಹೊರಡುತ್ತಾರೆ. ಗಟ್ಟಯಾದ ದಾಂಪತ್ಯಕ್ಕೆ ಅವರೊಂದು ಕಾರಣವಾಗುತ್ತಾರೆ‌. ಈ ದಾಂಪತ್ಯ ಪಯಣದಲ್ಲಿ, ಗಂಡನ ಅಥವಾ ಹೆಂಡತಿಯ ಅಗಲಿಕೆ, ದಾಂಪತ್ಯ ಜೀವನದ ನಿರ್ವಾತ ಪ್ರಜ್ಞೆ. ಮತ್ತೊಮ್ಮೆ ತಮ್ಮ ಜೀವನದ ಪುಟಗಳನ್ನು ಒಬ್ಬರೇ ಬರೆಯುವ ಅನಿವಾರ್ಯತೆ. ಅಗಲಿಕೆಯ ನಂತರ ಕಳೆದ ದಾಂಪತ್ಯದ ಸುಂದರ ನೆನಪು ಮಾತ್ರ. ಅದೂ ಸುಂದರವಾಗಿ ನಾವು ಬರೆದಿದ್ದರೆ! ಅವರ ಮನದಲ್ಲಿ ನಮ್ಮಯ ಸುಂದರ ನೆನಪಿನ ಬೀಜ ಬಿತ್ತಿದ್ದರೆ!

ತಾಯಿ, ಮಗ ಬೆಟ್ಟದ ಮತ್ತೊಂದು ಘಟ್ಟದವರೆಗೂ ಹೋಗಿ ವಾಪಸಾದರು. ಕಾರಣ ತಾಯಿಗೆ, ಆ ಕಡಿದಾದ ಬೆಟ್ಟವ ನೋಡಿ ಭಯ, ಧೈರ್ಯ ನೀಡಲು ಪತಿ ಬಳಿಯಲಿಲ್ಲ. ಮಗನಿಗೆ ಉತ್ಸಾಹವಿದ್ದರೂ, ತಾಯಿಯ ಭಯ ಅವನನ್ನು ಹಿಂತಿರುಗುವಂತೆ ಮಾಡಿತು. ಇಬ್ಬರೂ ನಾನು ಕುಳಿತಿರುವಲ್ಲಿಗೆ ಬಂದರು. ಸ್ವಲ್ಪ ಸಮಯ ಅಲ್ಲಿಂದ ಕಾಣುತ್ತಲಿದ್ದ  ಸುಂದರ ಚಿತ್ರಗಳನ್ನು ಸೆರೆಹಿಡಿದು. ಬೆಟ್ಟವನ್ನು ಇಳಿಯಲು ಪ್ರಾರಂಬಿಸಿದೆವು. ನನ್ನ ಮನದ ಮೂಲೆಯಲ್ಲೊಂದು ದನಿ. ನನ್ನಿಂದ ಮಡದಿ, ಮಗ ಬೆಟ್ಟ ಸಂಪೂರ್ಣ ಏರಲು ಸಾದ್ಯವಾಗಲಿಲ್ಲವೆಂದು‌!

ಈ ಬೆಟ್ಟವೇ ಹಾಗೆ, ಪತಿ ಅಥವಾ ಪತ್ನಿಯಿದ್ದಂತೆ, ಪರಸ್ಪರ ಅರಿತರೆ, ಅದರ ಮೇಲಿನ ಈ ದಾಂಪತ್ಯವೆಂಬ ಜೀವನದ ಪಯಣ ಸುಲಭ. ಬೆಟ್ಟ ಪರಿಚಯವಾದಂತೆ ಆತ್ಮೀಯವಾಗತೊಡಗುತ್ತದೆ. ಏರುವುದು ನಮ್ಮಯ ಸಾಮರ್ಥ್ಯ.  ಏರಿದರೆ ಅದರದೆ ಆದ ಸೌಂದರ್ಯ ಅವಗಾಹಿಸಿ, ಮನ ತೃಪ್ತಿಗೊಂಡಂತೆ. ಏರದಿದ್ದರೆ ದಾಂಪತ್ಯದ ಸುಂದರ ಸ್ವಪ್ನ ಭಗ್ನಗೊಂಡಂತೆ. ಬದುಕಿನ ಜೊತೆಗಾತಿ ಅಥವಾ ಜೊತೆಗಾರನ ಸಾನಿಧ್ಯದಿಂದ ದೂರವಾದಂತೆ, ಸುಂದರವಾದ ಮನಸ್ಸೊಂದನ್ನು ಅರ್ಥಮಾಡಿಕೊಳ್ಳುವ ಅವಕಾಶದಿಂದ ವಂಚಿತವಾದಂತೆ.

ಎರಡು ಬೇರೆ ಬೇರೆ ಮನದ ಸುಂದರ ವಿಚಾರ!
ಸೇರಾಗಲಿ, ಬದುಕಿನ ಕಥೆಯ ಒಂದು ಸುಂದರ ಪ್ಯಾರ!
ನನ್ನಯ ಮನದಲಿ, ನಿನ್ನಯ ಪ್ರೀತಿ ಚಿರಂತನ!
ನಮ್ಮಯ ಬದುಕು, ಇರಲೆಂದೂ ವಿನೂತನ!




















Comments

  1. ಮೈದಾ ಹಿಟ್ಟು.. ಚಿರೋಟಿ ರವೆ ಎರಡನ್ನು ಹದವಾಗಿ ಕಲಸಿಟ್ಟುಕೊಂಡು, ನಂತರ ತೊಗರಿಬೇಳೆಯನ್ನು ಬೇಯಿಸಿ, ಅದಕ್ಕೆ ಬೆಲ್ಲವನ್ನು ಸೇರಿಸಿ.. ಚೆನ್ನಾಗಿ ಇಂಗಿಸಿ ಹೂರಣವನ್ನು ಮಾಡಿಕೊಂಡರೆ ಅಲ್ಲಿಂದ ಶುರು.. ಒಬ್ಬಟ್ಟಿನ ಘಮ ಘಮ..

    ನಿನ್ನ ಲೇಖನವೂ ಹಾಗೆ.. ಬದುಕಿನ ಹಲವಾರು ಮಜಲುಗಳನ್ನು ದಾಟಿ.. ಹಲವಾರು ಹಂತಗಳನ್ನು ಸಲೀಸಾಗಿ ಪದಗಳಲ್ಲಿ ಹರಿಸಿರುವ ರೀತಿ ಸೂಪರ್.. ಮಧ್ಯೆ ಮಧ್ಯೆ ನಾಲ್ಕು ಸಾಲಿನ ಕವನಗಳು.. ದಾಂಪತ್ಯದ ಜೋಡಿ ಕಾಲುಗಳನ್ನು ತೋರಿಸುತ್ತೆ..

    ಚಾರಣ.. ಪ್ರವಾಸಿ ಕಥಾನಕ .. ಅದರ ರೋಚಕ ಕ್ಷಣಗಳು.. ಜೊತೆಯಲ್ಲಿ ಬಿಸಿಲಿನ ಜಳಕ ಎಲ್ಲವೂ ಸೊಗಸಾಗಿ ಮೂಡಿಬಂದಿದೆ. .ನಿನ್ನ ಬರಹದ ಶೈಲಿ ಓದುಗರನ್ನು ಹಾಗೆ ಕರೆದುಕೊಂಡು ಹೋಗುತ್ತದೆ ಒಂದು ಅರಿವಿಲ್ಲದ ಭಾವನಾತ್ಮಕ ಲೋಕಕ್ಕೆ..

    ಸೂಪರ್... buddy.. !

    ReplyDelete
  2. Good. With every opportunity, your life enlargement would have made the writing more superb. Use such opportunity created by you in the story by filling up the blanks and add from your child hood days to present. Good luck.

    ReplyDelete

Post a Comment

Popular posts from this blog

ಒಂದು ಮಗುವಿನ ಕಥೆ...

ಝಣ...ಝಣ...ಹಣದ ನಿನಾದ!