Posts

ನನ್ನ ಗೆಳೆತನದ ಆಗಸದ....ರವಿ -ಸೋಮ!

ಹೊರಗೆ ಕದವನ್ನು ಯಾರೋ ನಿಧಾನವಾಗಿ ತೆರೆದು, ಅವಸರದಿಂದ ನಡೆದುಹೋಗುತ್ತಿರುವ ಸದ್ದು. ಹೊರಗೆ ಇನ್ನೂ ಬೆಳಕಾಗಿಲ್ಲ! ಕಳ್ಳನಿರಬಹುದೊ? ಭಯವೆನಿಸಿತು. ರಗ್ಗನ್ನು ಮುಖದ ತುಂಬಾ ಹೊದೆದು, ಯೋಚಿಸತೊಡಗಿದೆ, ಇಷ್ಟೊಂದು ಚಳಿಯಲ್ಲಿ ಹೊರಗೆ ಯಾರಿರಬಹುದು? ಸಂಪೂರ್ಣ ಬೆಳಗಾದೊಡನೆ ಹೊರಗೆ ಬಂದು ಏನಾದರೂ ಮಾಹಿತಿ ಸಿಗಬಹುದೆಂಬಂತೆ ನೋಡಿದೆ, ಯಾವೂದೇ ವಿಷಯದ ಸುಳಿವಿಲ್ಲ. ಮನ ನಿರಾಳವಾಯಿತು. ಆದರೂ ಮನದ ಮೂಲೆಯಲ್ಲೊಂದು ಪ್ರಶ್ನೆ, ಯಾರಿರಬಹುದು ಆ ಕತ್ತಲೆಯಲ್ಲಿ? ನನ್ನ ಪ್ರೈಮರಿ ಶಾಲೆಯ ವಿಧ್ಯಾಭ್ಯಾಸ ಮುಗಿಯಲು ಮನೆಯ ಮಂದಿ ಕಾಯುತ್ತಿದ್ದರೆನಿಸುತ್ತದೆ. ಪ್ರೈಮರಿ ವಿಧ್ಯಾಭ್ಯಾಸ ಮುಗಿದಿತ್ತು. ಹೊಸ ಮನೆಗೆ ಬಾಡಿಗೆಗೆ ಬಂದಿದ್ದೆವು. ಆ ವಠಾರದಲ್ಲಿ ನಾಲ್ಕೇ ಮನೆ. ಹೈಸ್ಕೂಲ್ ಇನ್ನೂ ಪ್ರಾರಂಭವಾಗಿರಲಿಲ್ಲ. ಏನು ಮಾಡುವುದೆಂದು ತೋಚಲಿಲ್ಲ. ಹೊಸ ಜಾಗ, ಹೊಸ ಜನ. ಆಟವಾಡಲು ಸ್ನೇಹಿತರಾರು ಇರಲಿಲ್ಲ. ಹಾಗೆ ವಠಾರದ ಮುಂಭಾಗಕ್ಕೆ ಬಂದು ನಿಂತೆ. ಅದೇ ಸಮಯಕ್ಕೆ ಒಬ್ಬ ವ್ಯಕ್ತಿ ವಠಾರವನ್ನು ಪ್ರವೇಶಿಸಿದ. ಬಿಳಿಯ ಉಡುಪು ಅಲ್ಲಲ್ಲಿ ಮಣ್ಣಾಗಿತ್ತು, ಒಂದು ಕೈಯಲ್ಲಿ ಕ್ರಿಕೆಟ್ ಬ್ಯಾಟ್, ಮತ್ತೊಂದು ಕೈಯಲ್ಲಿ ಕ್ರಿಕೆಟ್ ಕಿಟ್. ನನ್ನನ್ನೊಮ್ಮೆ ಪ್ರಶ್ನಾರ್ಥಕವಾಗಿ ನೋಡಿ ವಠಾರದ, ನಮ್ಮ ಮನೆಯ ಎಡಭಾಗದ ಮನೆಗೆ ಒಳಗೆ ಮಾಯವಾದ. ಅದರೆ ನನ್ನ ಮನದಲ್ಲಿದ್ದ ಪ್ರಶ್ನೆಗೆ ಉತ್ತರ ನೀಡಿ ಹೋಗಿದ್ದ. ಮಾರನೆಯ ದಿನ ಅದೇ ಸಮಯಕ್ಕೆ ಅದೇ ವೇಷದಲ್ಲಿ ಆ ವ್ಯಕ್ತಿ ಪ್ರತ್ಯಕ್ಷನಾದ. ನ

ಸಿಂಪಲ್ಲಾಗ್ ಒಂದ್ ನೋವ್ ಸ್ಟೋರಿ!

"ಏ ಸೀನ ನಿಂತ್ಕೊಳ್ಲ" ಯಾರೋ ಕರೆದಂಗಾಯ್ತು. ಹಿಂದುರಿಗಿ ನೋಡಿದೆ. ನಿಂತೆ. ಕರೆದ ವ್ಯಕ್ತಿ ಹತ್ತಿರ ಬಂದು. "ಏನ್ಲಾ ಎಸ್ಟು ವರ್ಸ ಆಯ್ತಲಾ ನೋಡಿ ನಿನ್ನ". ಯಾರೆಂದು ಗೊತ್ತಾಗ್ಲಿಲ್ಲ ನೀವು. ಎಂದೆ. ಬಡ್ಡ್ಐತದೆ ನನ್ನೇ ಮರ್ತೇನ್ಲಾ ನೀನು. ನಾನು ಕಣ್ಲಾ ಮಂಜ, ನಿನ್ ಚಡ್ಡಿ ದೋಸ್ತು! ನನ್ನ ಮುಖ ಅರಳಿತು. ಎಷ್ಟೋ ವರುಷದ ಹಿಂದಿನ ನಮ್ಮ ಗೆಳೆತನ ನೆನಪಿಗೆ ಬಂತು. ಮಾತು ಅವನ ದಾಟಿಗೆ ಹೊರಳಿತು. ಏ ಮಂಜ ಎಲ್ಲಿದ್ಯ್ಲ ನೀನು? ಮೊನ್ನೆ ಹಳ್ಳಿಗೆ ಬಂದು, ಅವ್ವನ ಕೇಳಿದ್ರೆ, ನೀನು ಮನೆ ಬಿಟ್ಟು ಹೊಂಟೊಗಿದ್ಯ ಅಂತಾ ಹೇಳಿದ್ರು? ಪ್ರಶ್ನೆ ಎಸೆದೆ. ಅವನ ಮುಖ ಚಿಕ್ಕದಾಯಿತು‌.  "ಅದಾ ಅದು ದೊಡ್ ಕತೆ ಕಣ್ಲಾ, ಹೇಳ್ತೀನಿ. ನೀನೇನ್ಲಾ ಇಲ್ಲಿ? ಹೊಲ ಗಿಲ ಎಲ್ಲಾ ಮಾರಿಬಿಟ್ಯಂತೆ ಖರೇ ಏನ್ಲಾ?" ಮುಖ ಚಿಕ್ಕದಾಗುವ ಸರದಿ ನನ್ನದಾಯಿತು.  ಹೂ ಕಣ್ಲಾ, ಪಟ್ಣ ಸೇರಿ ಏನಾರ ಮಾಡವ ಅಂತಾ ಬಂದೆ. ಖರ್ಚಿಗ್ ಒಸಿ ಕಾಸ್ ಬೇಕಿತ್ತು. ಇದ್ದಿದ್ದು ಒಂದು ಹೊಲ ಮಾರಿ ಹಳ್ಳಿ ಹಂಗೇ ಬೇಡಂತಾ ಬಂದ್ಬುಟ್ಟೆ ಕಣ್ಲಾ!" ಕಣ್ಣಿನ ಕೊನೆಯಲ್ಲಿ ಮೂಡಿದ ಕಣ್ಣಿರನ್ನು ಅತನಿಗೆ ತಿಳಿಯದ ರೀತಿಯಲ್ಲಿ ಒರೆಸಿಕೊಂಡೆ". ಏನ್ ಮಾಡ್ಕಂಡಿದ್ಯಲಾ ನೀನು. ಅವನ ಪ್ರಶ್ನೆಗೆ ಉತ್ತರವಿದ್ದರೂ ನೀಡದೆ, ಮಾತು ಬದಲಾಯಿಸಿದೆ. ಅದಿರ್ಲಿ ಮಂಜ, ನೀನೆಂಗ್ಲಾ ಇಲ್ಲಿ? ”ಏ ಒಸಿನಾ ನನ್ ಕಷ್ಟ. ಆ ಮಾದ ಕೂಡಾ ಇಲ್ಲೇ ಅವ್ನ್ಲಾ. ದೊಡ್ ಕಂಪ್ನಿನಾಗೆ ಕೆಲ್ಸ್ವಂತೆ

ಗಿರಿಕನ್ಯೆ......ನನ್ನ ಮನದನ್ನೆ!

ಅಕ್ಷರಾಕ್ಷರ ಸೇರಿ ಪದವಾಯಿತು. ಪದಪದಗಳು ಸೇರಿ ಮಾತಾಯಿತು! ಜೀವನದ ಪುಟಗಳು ಮೊದಲಾಯಿತು! ನಾನೇ ಬರೆದ ನನ್ನಯ ಬದುಕಿನ ಸಾಲಾಯಿತು! ನನ್ನಯ ಬದುಕು, ನನ್ನದೇ ಮಾತು! ಕವಿಯು ನಾನೇ, ಪಾತ್ರವೂ ನಾನೇ! ಪಾತ್ರಕೆ, ಜೀವನದ ಘಟನೆಯ ನಂಟು! ಅದ ನಿಭಾಯಿಸುವ ಪರಿ, ನಿನ್ನ ನಿಘಂಟು! ಕಣ್ಷೆದುರಿಗೆ ಅಗಾಧವಾದ ಬೆಟ್ಡ. ತಳದಿಂದ ಮುಡಿಯವರೆಗೂ ಒಮ್ಮೆ ಕಣ್ಣಳತೆ ಮಾಡಲು ಪ್ರಯತ್ನಿಸಿದೆ, ಕೊನೆ ನನ್ನ ಕಣ್ಣಳತೆಗೆ ಮೀರಿತ್ತು. ಸಮಯ ೧೧ ದಾಟಿತ್ತು. ಸೂರ್ಯ ನೆತ್ತಿಯ ಸುಡಲು ಒಡೋಡಿ ಬರುತ್ತಿದ್ದ, ಮಡದಿ, ಬೆಟ್ಟವನ್ನು ಹತ್ತಬೇಕೆಂದರೆ ಮನೆಯನ್ನು ಬೇಗನೇ ಬಿಡಲು ಬಾರಿಬಾರಿ ಹೇಳಿದ್ದಳು, ಆದರೆ ಭಾನುವಾರದ ಸವಿಯಾದ ನಿದ್ದೆಯಿಂದ ಏಳಲಾರದೆ ಎದ್ದು ಹೊರಟು, ಮಧುಗಿರಿಯನ್ನು ತಲುಪಿದಾಗ ೧೧  ದಾಟಿತ್ತು. ಮಡದಿ, ಮಗ ಬೆಟ್ಡವನ್ನು ಹತ್ತಲು ಉತ್ಸುಕರಾಗಿದ್ದರು, ಮಡದಿ ಮತ್ತೊಮ್ಮೆ ಹೇಳಿದಳು, ಇಷ್ಟೊಂದು ಬಿಸಿಲು, ನಾವು ಮುಂಜಾನೆಯೇ ಮಧುಗಿರಿ ತಲುಪಬೇಕಿತ್ತು. ಬೆಟ್ಟವನ್ನು ಮತ್ತೊಮ್ಮೆ ನೋಡಿದೆ. ನನ್ನ ಊಹೆಯಂತಿರಲಿಲ್ಲ. ಊಹೆಗೂ ಮೀರಿ. ಕೋಟೆ, ಗಿರಿಗಳ ಸಮ್ಮಿಶ್ರದ ಮಧುಗಿರಿ ಉಳಿದ ಬೆಟ್ಟಗಳಿಗಿಂತ ವಿಶಿಷ್ಟವಾಗಿತ್ತು. ಮಡದಿಯನ್ನೊಮ್ಮೆ ನೋಡಿದೆ, ಮನ ಹಿಂದೋಡಿತು. ಅಂದು ಮದುವೆಗೆ ಹುಡುಗಿಯ ನೋಡಲು ದಿನ ನಿಶ್ಷಯವಾಗಿತ್ತು. ಕನ್ನಡ, ತೆಲುಗು ಸಿನಿಮಾಗಳನ್ನು ನೋಡಿ ಬೆಳದಿದ್ದ ಮನ ಅದೇ ದಾಟಿಯ ಕನಸಿನ ಕನ್ಯೆಯ ಹುಡುಕಾಟದಲ್ಲಿತ್ತು. ಸುಂದರ ಮೊಗದ, ನಾಚಿಕೆ ವಯ್ಯಾರದ,

ಒಂದು ಮಗುವಿನ ಕಥೆ...(ಮುಂದುವರೆದ ಭಾಗ)

ಶ್ರೀ ನನ್ನ ಲೇಖನಕ್ಕೆ ಬರೆದ ಕಾಮೆಂಟ್ಸ್,  ಆತನ ತಂದೆಯ ಉಲ್ಲೇಖ, ನನ್ನನ್ನು ತಂದೆಯ ನೆನಪಿಗೆ ದೂಡಿತ್ತು. ಆಂದು ಮನಸ್ಸು ಛಿದ್ರವಾಗಿತ್ತು, ಏನು ಮಾಡಲಾಗದ ಅಸಹಾಯಕತೆ, ಯಾರ ಮಡಿಲಿನಲ್ಲಿಯಾದರು ತಲೆಯಿಟ್ಟು ಬಿಕ್ಕಿಬಿಕ್ಕಿ ಅತ್ತು ಮನಸ್ಸನ್ನು ತೆರೆದಿಟ್ಟುಕೊಳ್ಳಬೇಕೆಂಬಷ್ಟು ದುಗುಡ! ಹೆಂಡತಿ ಆಗ ತಾನೆ ಹತ್ತಿರವಾಗುತ್ತಿದ್ದಳು!  ಅಕ್ಕಂದಿರು ಅವರದೇ ಆದ ದುಃಖದಲ್ಲಿದ್ದರು! ತಂದೆಯ ಸಾವನ್ನು ಮನಸ್ಸು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಅಪ್ಪ ಇನ್ನೂ ಬೇಕೆನಿಸುತ್ತಿದ್ದರು. ಅವರನ್ನೇ ತಬ್ಬಿಕೊಂಡು ಅಳಬೇಕೆನಿಸುತ್ತಿತ್ತು!  ತಡೆಹಿಡಿದಷ್ಟು ಕಣ್ಣೀರು ಹರಿಯುತಲಿತ್ತು! ೭೯ ವಸಂತಗಳನ್ನು ಕಂಡ ಜೀವ, ಈ ಬದುಕಿಗೊಂದು ಕೊನೆಯ ಸಲಾಮು ಹೇಳಿ, ನಿಶ್ಚಿಂತೆಯಿಂದ ಮಲಗಿತ್ತು. ಅವರ ಮುಖದ ಮೇಲಿನ ಶಾಂತತೆ, ನನ್ನ ದುಃಖವನ್ನು ದ್ವಿಗುಣಗೊಳಿಸಿತ್ತು. ಮುಖದ ಒಂದೊಂದು ಸುಕ್ಕು, ಒಂದೊಂದು ಕಥೆ ಹೇಳುತ್ತಿರುವಂತೆ ತೋರುತ್ತಿತ್ತು. ಅವರ ಜೊತೆ ಕಳೆದ ಒಂದೊಂದೇ ಘಟನೆಗಳು ಅವರಿಲ್ಲವೆಂಬ ನೆನಪು ಮಾಡಿಸಿ, ದುಗುಡವನ್ನು ಹೆಚ್ಚಿಸುತ್ತಿದ್ದವು. ಬಾಲ್ಯದಲ್ಲಿ ಅಪ್ಪನೆಂದರೆ ಭಯ! ಅವರು ಕೊಡುವ ಏಟಿನ ಗಮ್ಮತ್ತು ಇನ್ನೂ ನೆನಪಿನಲ್ಲಿದೆ! ಬಿಸಿಲಿನಲ್ಲಿ ಆಡುತ್ತಿದ್ದದ್ದನ್ನು ನೋಡಿದರೆ, ಹಿಂದಿನಿಂದ ಚಟೀರ್ ಎಂಬ ಶಬ್ದ, ನಂತರ ಉರಿ! ಬಿಸಿಲಿನಲ್ಲಿ ಆಡುವಾಗ, ದೂರದಿಂದಲೇ ಅವರು ಬರುವುದ ಕಂಡರೆ, ಎದ್ದೆನೊ, ಬಿದ್ದೆನೊ ಎಂಬಂತೆ ದೌಡು! ಅಷ್ಟು ಭಯ! ಅಪ್ಪನೊಡನೆ ಆಟವಾಡಿ

ಒಂದು ಮಗುವಿನ ಕಥೆ...

ಬಿತ್ತೊಂದು ಮುದ್ದಿನ ಕೂಸೊಂದು ತೋಳಲ್ಲಿ! ಇವನಾರೆಂಬ ನೋಟ ಪಿಳಿಪಿಳಿ ಕಂಗಳಲ್ಲಿ! ರಸಪುರಿ ಮಾವಿನ ಹಣ್ಣಿನ ತುಂಬಿದ ಕೆನ್ನೆ, ಹಲ್ಲೇ ಇಲ್ಲದ ಇಷ್ಟೆ ಇಷ್ಟು ಪುಟಾಣಿ ಬಾಯಿ! ಮುಚ್ಚಿದ ಬೆರಳಿನ ಪುಟ್ಟ ಪುಟ್ಟ ಕೈ! ಬಡಬಡ ಬಡಿಯುವ ಪುಟಾಣಿ ಕಾಲು! ಮುದ್ದಿಗೇ ಮುದ್ದು ಈ ಪುಟಾಣಿ ಜೀವ! ಮುಗ್ದತೆ ತುಂಬಿದ ಸುಂದರ ಕಾಯ! ಹಸಿವಾದರೆ ಅಳುವ, ಕನಸಲಿ ನಗುವ! ಸುಂದರ ಕಿಶೋರ, ನಮ್ಮನೆ ರಾಯ! ಮನದಲ್ಲಿ ತಿಳಿಯದ ಸಂತಸ, ಎದೆಗೊರೆಸಿಕೊಳ್ಳಬೇಕೆಂಬ ಬಯಕೆಯನ್ನು, ಸಣ್ಣ ಮಗು ಬಿದ್ದರೆ ಎಂಬ ಭಯದಿಂದ ಹಾಗೆ ಮನದಲ್ಲೇ ಅದುಮಿಟ್ಟುಕೊಂಡೆ! ಹೆಂಡತಿಯ ಮುಖದಲ್ಲಿ ಬಸವಳಿದರೂ, ಮಂದಹಾಸ ಹೊರಹೊಮ್ಮುತ್ತಿತ್ತು!  ಮಗುವಿನ ಪಕ್ಕದಲ್ಲೇ ಇರಬೇಕೆಂದು ಮನ ಬಯಸಿದರೂ, ಇತರ ಕೆಲಸಗಳು ಅದಕ್ಕೆ ಅನುವು ಮಾಡಕೊಡುತ್ತಿರಲ್ಲಿಲ್ಲ! ಮಗು! ಈ ಪದ ಕೇಳಿದರೆ ಮನಸ್ಸೊಮ್ಮೆ ತಿಳಿಯಾಗುತ್ತದೆ! ಮೊದಲೇ ನನಗೆ ಮಕ್ಕಳೆಂದರೆ ತುಂಬಾ ಇಷ್ಟ, ಅದರಲ್ಲೂ ನನ್ನದೇ ಮಗು, ಆಡಲೊಂದು ಸ್ವಂತ ಆಟಿಕೆ ಸಿಕ್ಕ ಮಗುವಿನಂತಾಗಿತ್ತು ಮನಸ್ಥಿತಿ! ಎಷ್ಟೋ ಬಾರಿ ಯೋಚನೆ ಮಾಡಿದ್ದಿದೆ! ಮಗುವಿನ ಮನಸ್ಸು ಶುಭ್ರವಾದ ಬಿಳಿಯ ಬಣ್ಣದ ವಸ್ತ್ರವಿದ್ದಂತೆ, ಏನೊಂದು ಅರಿಯದ ಅದರ ಮನಸ್ಸು ನಮ್ಮಗಳ ಕೈಯಲ್ಲಿ! ಅದಕ್ಕೆ ಅರಿವಾಗುವುದು ಹಸಿವೊಂದೇ, ಹಾಗೂ ತನ್ನೊಂದಿಗೆ ತರುವ ಆ ಅಳು! ಆ ಹಸಿವೊಂದರ ಆಧಾರದ ಮೇಲೆ, ನಾವು ಆ ಶುಭ್ರ ಬಿಳಿವಸ್ತ್ರವನ್ನು ಬದಲಾಯಿಸುತ್ತಾ ಹೋಗುತ್ತೇವೆ! ಆ ಅಳುವೆಂಬ ಒಂದೇ ಭಾವನೆಗೆ, ನಗು,

ಝಣ...ಝಣ...ಹಣದ ನಿನಾದ!

ಕುರುಡು ಕಂಚಾಣ ಕುಣಿಯುತಲಿತ್ತೊ, ಕಾಲಿಗೆ ಬಿದ್ದವರ ತುಳಿಯುತಲಿತ್ತೊ! ಕವಿಯ ಈ ನುಡಿಯಲ್ಲಿ ಎಷ್ಟೊ ಅರ್ಥವಡಗಿದೆ. ಹಣ ಎಂದೊಡನೆ ಎಲ್ಲರ ಕಿವಿ ನಿಮಿರುವುದು, ಸರ್ವವಿಧಿತ. ಹಣ ಎಂದರೆ, ಹೆಣವೂ ಬಾಯಿ ಬಿಡುತ್ತದೆ ಎಂಬ ಗಾದೆ, ವೇದ ಸುಳ್ಳಾದರೂ, ಗಾದೆ ಸುಳ್ಳಾಗದು ಎಂಬ ಮಾತನ್ನು ಅಕ್ಷರಶಃ ನಿಜವಾಗಿಸುತ್ತದೆ. ಪ್ರಪಂಚವೇ ಹಣದ ಸುತ್ತ ಸುತ್ತುತ್ತಿದೆ. ಎಲ್ಲ ವ್ಯವಹಾರವೂ ಹಣದ ಸುತ್ತ! ಹಣವೆಂಬ ಮಾಯಾಕುದುರೆ ಏರಿ! ಜಗವೆಂಬ ಪರ್ವತವನ್ನೇರುವ ಸಿದ್ದತೆ! ಮನವೆಂಬ ಮರ್ಕಟ ಯಮಾರಿ! ಏರಿತೇ ಪರ್ವತ? ಏರಿ ಗೆದ್ದೀತೇ? ಜಗವೆಂಬ ಸುಂದರ ಮಾಯಾನಗರಿ ಕೊಂಡುಕೊಳ್ಳುವ ಬಯಕೆ, ಬಯಸಿದೆಲ್ಲವ! ಹಸಿವನು ಜಯಿಸಲು ಹಣ ಸಾಕಂತೆ! ಮಗ, ಮಡದಿ ಸಾಕಲು ಹಣವೇ ಬೇಕಂತೆ! ಹಣವೊಂದಿದ್ದರೆ, ಪ್ರಪಂಚದಲ್ಲಿ ಏನನ್ನಾದರೂ ಪಡೆಯಬಹುದೆಂಬ ನಂಬಿಕೆ ಹಲವರದು. ಹಣವನ್ನು ಪಡೆಯುವುದಕ್ಕಾಗಿ, ಹಲವಾರು ವೇಷಭೂಷಣಗಳು, ಹಲವಾರು ಮುಖವಾಡಗಳು. ಮೋಸ, ವಂಚನೆ, ದರೋಡೆ,..ಈ ಪದಗಳ ಜನ್ಮಕ್ಕೆ, ಕಾರಣವೇ ಈ ಹಣ ಎಂದರೆ ಅತೀಶಯೋಕ್ತಿಯಲ್ಲ. ಹೌದು, ಏಕೆ ಈ ಹಣವೆಂದರೆ ನಮಗೆ ಅಷ್ಟೊಂದು ಮಮಕಾರ? ಹಣವಿಲ್ಲದಿದ್ದರೆ ಹೊಟ್ಟೆಗೆ ಹಿಟ್ಟಿಲ್ಲವೆಂಬ ಕಾರಣದಿಂದ ಹಿಡಿದು, ಸಂಬಂಧಿಕರ  ಮಧ್ಯೆ ಗೌರವವಿರುವುದಿಲ್ಲವೆಂಬ ಕಾರಣದವರೆಗೂ ಕಾರಣಗಳು ಹಲವಾರು ಹಣವೇ ಎಲ್ಲಾ ಎಂಬ ಭಾವನೆಯ ಜೊತೆಜೊತೆಗೆ ಕೂಡಿಟ್ಟ ಹಣ ಸತ್ತಾಗ ಒಯ್ಯುವುದಿಲ್ಲವೆಂಬ ಜ್ಞಾನ ದ ಆಸರೆಯೊಂದಿಗೆ ಮಾನವ ಹಣದ ಮೇಲೆ ಅವಲಂಬಿತನಾಗಿದ್

ಗೆಳೆತನದ ಮಿಡಿತ!

ಮನದಲ್ಲೊಂದು ಪ್ರಶ್ನೆ ಎರಡು ಮೂರು ದಿನದಿಂದ ಎಡಬಿಡದೆ ಕಾಡುತ್ತಿತ್ತು. ಉತ್ತರ ಗೊತ್ತಾಗದ ಅಸಹಾಯಕತೆ, ಉತ್ತರ ಗೊತ್ತಾಗಿಯು ಒಪ್ಪಿಕೊಳ್ಳಲಾರದಂತ ಮನಸ್ಥಿತಿ. ಏಕೋ ಮೊದಲಿನ ಜೀವನವೇ ಉತ್ತಮ ಎಂಬ ಫಿಲಾಸಫಿ! ನನಗೆ ಗೆಳೆಯರು ತುಂಬಾ ಕಡಿಮೆ, ಕಾರಣ ನನ್ನ ಮಾತು ಕಡಿಮೆ, ಅಂತರ್ಮುಖಿ, ಅಷ್ಟೊಂದು ಸುಲಭವಾಗಿ ತೆರೆದುಕೊಳ್ಳಲಾರದಂತ ಮನಸ್ಸು, ಗೆಳೆತನಕ್ಕೆ ನೀಡಬೇಕಾದ ಸಮಯ ನೀಡಲಾಗದ ಅಸಹಾಯಕತೆ, ಹೀಗೆ ಕಾರಣ ಹಲವು! ಬೆರಳೆಣಿಕೆಯಷ್ಟು ಗೆಳೆಯರು, ನೆಚ್ಚಿನ ಮಡದಿ, ಮುದ್ದಿನ ಮಗ, ಜೀವನ ಇವರ ಮದ್ಯ ಸುಂದರವಾಗಿ ಸಾಗುತ್ತಿತ್ತು. ಅನಿವಾರ್ಯತೆಗಳ ಆಧಾರಗಳ ಮೇಲೆ ನನ್ನ ಸಮಯ ಇವರುಗಳೊಂದಿಗೆ ವಿನಿಯೋಗವಾಗುತ್ತಿತ್ತು! ಸಂಬಂಧಗಳಿಗೆ ಬೆಲೆ ಕೊಡುವುದು ಎಷ್ಟು ಮುಖ್ಯವೋ, ಸಮಯ ನೀಡುವುದು ಅಷ್ಟೇ ಮುಖ್ಯ. ನಾನು ಮತ್ತು ನನ್ನ ಮಡದಿ ಹಲವಾರು ಬಾರಿ ಯೋಚಿಸಿದ್ದಿದೆ, ನಮ್ಮ ಬಳಿ ಸಮಯವೇ ಇಲ್ಲವೆಂದು. ಟ್ರಾಫಿಕ್ ಪೊಲೀಸ್, ಹೆಲ್ಮೆಟ್ ಇಲ್ಲವೆಂದೊ ಅಥವಾ ಮತ್ತಾವುದೊ ಕಾರಣಕ್ಕೆ ನಿಲ್ಲಿಸಿ ಸಮಯ ವ್ಯರ್ಥಮಾಡಿದರೆ, ಆತನಿಗೆ ಒಂದು ಸಲಾಮ್ ಹೊಡೆದು, ಸಮಯ ಹಾಳುಮಾಡದೆ ಕೊಡಬೇಕಾದ ಶುಲ್ಕ ಕೊಟ್ಟು, ಅಲ್ಲಿಂದ ಪಾರಾಗುವುದು ಮುಖ್ಯವಾಗುತ್ತದೆಯೇ ಹೊರತು, ಆತನೊಂದಿಗೆ ವ್ಯರ್ಥ ಕಾಲಾಹರಣ ಮಾಡಿ ೧೦೦-೨೦೦ ಉಳಿಸುವ ಸಮಯವಿರುವುದಿಲ್ಲ. ಇದನ್ನು ನೆನಪಿಸಿಕೊಂಡು ಅಸಹಾಯಕತೆಯ ನಗೆ ನಕ್ಕು ಸುಮ್ಮನಾಗಿದ್ದಿದೆ! ಸಂಬಂಧಗಳು ನಮ್ಮ ಜೀವನಶೈಲಿಗೆ ತಳುಕುಹಾಕಿಕೊಂಡು, ದೋಣಿಯ ಲಯಕ್ಕೆ, ನದಿ